ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಸಾವಿಷ್ಕಾರ್ — 2023 ವಾರ್ಷಿಕೋತ್ಸವ ಸಮಾರಂಭ

ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಸಾವಿಷ್ಕಾರ್ — 2023 ವಾರ್ಷಿಕೋತ್ಸವ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ಮಂಗಳೂರು ಉತ್ತರ ವಾರ್ಡ್‌ನ ಮಾಜಿ ಉಪ ಮೇಯರ್ ಶ್ರೀಮತಿ ಶಕೀಲಾ ಕಾವ ಅವರು ಮಾತನಾಡಿ ಉತ್ತಮ ಸಂಸ್ಕಾರದಿಂದ ಕೂಡಿದ ಕಾರ್ಯಕ್ರಮಗಳು ಇಲ್ಲಿ ನಿರಂತರ ನಡೆಯುತ್ತಿವೆ. ಈ ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ ಎಂದರು.

ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲವಾಗುವಂತೆ ನಿರ್ಮಾಣಗೊಂಡ ಸುಸಜ್ಜಿತ ಸ್ಮಾರ್ಟ್‌ಕ್ಲಾಸ್‌ನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಶ್ರೀ ವಿಶ್ವೇಶ್ವರ ಭಟ್ ಮೊಳೆಯಾರ ಅವರು ಸಂಸ್ಥೆಯ ವೈಶಿಷ್ಟ್ಯ‌ದ ಬಗ್ಗೆ ಮಾತನಾಡುತ್ತಾ ಇದು ಪ್ರಾಚೀನ ಕಾಲದ ಗುರುಕುಲದಂತೆ ಭಾಸವಾಗುತ್ತಿದೆ. ಈ ವಠಾರದಲ್ಲಿ ಧನಾತ್ಮಕ ಶಕ್ತಿ ಕಂಡುಬರುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳ ಪಾಠವೂ ದೊರೆಯುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಶ್ರೀ ರಾಮಕೃಷ್ಣ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ಶ್ರೀಮತಿ ವೀಣಾ.ಕೆ ಅವರು ವಿದ್ಯಾರ್ಥಿಗಳ ಓದಿಗೆ ಅತ್ಯಂತ ಅನುಕೂಲವಾದ ಪರಿಸರವಿದು, ವಿದ್ಯಾರ್ಥಿಯು ಉತ್ತಮ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ವಿದ್ಯಾಸಂಸ್ಥೆ ಮತ್ತು ಅಧ್ಯಾಪಕರಲ್ಲಿ ಅಭಿಮಾನ ಹೊಂದಿ ಮುನ್ನಡೆದರೆ ಅವನು ಭಾರತದ ಸತ್ಪ್ರಜೆಯೆನಿಸುತ್ತಾನೆ. ಅಂತಹ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ನಿರ್ಮಾಣಗೊಳ್ಳಲು ಸಾಧ್ಯ ಎಂದರು.

ಸಂಸ್ಥೆಯ ಸೇವಾ ಸಮಿತಿ ಸದಸ್ಯ ರಮೇಶ್ ಭಟ್ ಸರವು ಅಧ್ಯಕ್ಷತೆ ವಹಿಸಿ, ಮಾತನಾಡಿ, ಸಂಸ್ಥೆಯ ಆವರಣ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಈ ವಿದ್ಯಾಲಯ ಪುಣ್ಯಭೂಮಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ಮಾರ್ಟ್ ಕ್ಲಾಸ್‌ನ ಉದ್ಘಾಟಕರಾದ ಶ್ರೀ ವಿಶ್ವೇಶ್ವರ ಭಟ್ ಮೊಳೆಯಾರ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ರಾಜಗೋಪಾಲ್. ಜಿ, ಉಪಾಧ್ಯಕ್ಷರಾದ ಶ್ರೀ ಮಹಾಬಲೇಶ್‌ ಭಟ್, ಸದಸ್ಯರಾದ ಶ್ರೀ ಜಯಪ್ರಕಾಶ್ ಮತ್ತು ಹರೀಶ್, ಸಂಸ್ಥೆಯ ಸಿಬ್ಬಂದಿ ಶ್ರೀ ಸತೀಶ್ ಶಾಸ್ತ್ರಿ ಇವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುತ್ತಿರುವ ಹಿರಿಯ ಕಲಾವಿದ ರಾಜ್ಯಪ್ರಶಸ್ತಿ ಪುರಸ್ಕೃತ ಶ್ರೀ ರವಿ ಅಲೆವೂರಾಯ ವರ್ಕಾಡಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಶ್ರೀ ರವಿ ಅಲೆವೂರಾಯ ಅವರನ್ನು ಕೂಡಾ ಸನ್ಮಾನಿಸಲಾಯಿತು.

ಸಂಸ್ಥೆಯ ಸೇವಾಸಮಿತಿಯ ಕೋಶಾಧಿಕಾರಿಗಳಾದ ಶ್ರೀ ಉದಯಶಂಕರ ನೀರ್ಪಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಂಶುಪಾಲರಾದ ಗಂಗಾರತ್ನ ಸಂಸ್ಥೆಯ ವಾರ್ಷಿಕ ವರದಿ ಮಂಥನ ವನ್ನು ವಾಚಿಸಿದರು.
ಈ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ನಿತೇಶ್ ದೇವಾಂಗ ಉಪಸ್ಥಿತರಿದ್ದರು.

ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವೈವಿಧ್ಯಮಯ ಸ್ಪರ್ಧೆಗಳ ಹಾಗೂ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಮತ್ತು ಬಹುಮಾನಗಳನ್ನು ನೀಡಲಾಯಿತು.

ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ಕಾರ್ತಿಕ್ ಕೃಷ್ಣ ಮತ್ತು ರಶ್ಮಿ ನಿರ್ವಹಿಸಿದರು.
ಉಪನ್ಯಾಸಕಿಯರಾದ ವೀಣಾ ಸ್ವಾಗತಿಸಿ, ಸಂಗೀತಾ ವಂದಿಸಿದರು.
ಜಯಂತಿ, ಮಲ್ಲಿಕಾ, ಗಾಯತ್ರೀ ಎನ್.ಎಸ್, ಗಾಯತ್ರೀ ಶ್ರೀನಿವಾಸ್, ಸಹನಾ, ಭವ್ಯಾ ಅತಿಥಿಗಳ ಪರಿಚಯ ಮತ್ತು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.

ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Highslide for Wordpress Plugin