ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

ನಂತೂರು, ಸೆ.8 : ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು  ಸಂಸ್ಥೆಯ ಸೇವಾಸಮಿತಿಯ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವರು ವಹಿಸಿದ್ದರು.

ಸುಂದರ ಸಮಾರಂಭದಲ್ಲಿ ಸಂಸ್ಥೆಯ ಸೇವಾಸಮಿತಿಯ ಕಾರ್ಯದರ್ಶಿ ಗೋರಿಗುಡ್ಡದ ಕಿಟ್ಟೆಲ್ ಮೆಮೋರಿಯಲ್ ಪ್ರೌಢಶಾಲೆಯ ಶಿಕ್ಷಕ ದ.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀಕೃಷ್ಣ ನೀರಮೂಲೆ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳು ಶಿಕ್ಷಕರ ಮತ್ತು ಸಂಸ್ಥೆಯ ಬಗ್ಗೆ ಅಭಿಮಾನ ಹೊಂದುವುದರಿಂದ ತಾವು ಬೆಳೆಯುವುದಲ್ಲದೆ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್‌ದಾಸ್ ಮತ್ತು ಪ್ರೌಢಶಾಲೆಯ ಹಿರಿಯ ಶಿಕ್ಷಕಿ ಸುಭದ್ರಾ ಭಟ್ ಅವರನ್ನೂ ಸನ್ಮಾನಿಸಲಾಯಿತು.

ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವರು ಸನ್ಮಾನಿತರನ್ನು ಅಭಿನಂದಿಸಿ, ಇವರೆಲ್ಲರ ಸೇವೆ, ತ್ಯಾಗ, ಶ್ರಮ, ಸಹಕಾರಗಳನ್ನು ಸದಾಕಾಲವೂ ನೆನಪಿಸಿ ಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇನ್ನು ಮುಂದೆಯೂ ಸಂಸ್ಥೆಯ ಮೇಲೆ ಇವರಿಗಿರುವ  ಪ್ರೀತಿ ಇದೇ ರೀತಿ ಮುಂದುವರಿಯಬೇಕೆನ್ನುವುದು ನಮ್ಮ ಆಶಯ ಎಂದರು.

 ಸಮಾರಂಭದಲ್ಲಿ ಸಂಸ್ಥೆಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಪ್ರೀತಿಪೂರ್ವಕವಾಗಿ ಗುರುತಿಸಲಾಯಿತು.

ಸಂದರ್ಭದಲ್ಲಿ ಕಿಟ್ಟೆಲ್ ಮೆಮೋರಿಯಲ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ, ಪ್ರಾಂಶುಪಾಲರಾದ ಗಂಗಾರತ್ನ, ಉಪಪ್ರಾಂಶುಪಾಲರಾದ ಗಾಯತ್ರಿ ಶೆಣೈ ಉಪಸ್ಥಿತರಿದ್ದರು.

ಸಂಸ್ಥೆಯ ಸೇವಾಸಮಿತಿಯ ಕಾರ್ಯಾಲಯ ಕಾರ್ಯದರ್ಶಿ ಎಮ್.ಟಿ ಭಟ್ ಸ್ವಾಗತಿಸಿ, ಉಪನ್ಯಾಸಕಿ ರಶ್ಮಿ ವಂದಿಸಿದರು. ಉಪನ್ಯಾಸಕ ಕಾರ್ತಿಕ್‌ಕೃಷ್ಣ ಸನ್ಮಾನಪತ್ರ ವಾಚಿಸಿದರು.

Highslide for Wordpress Plugin