ಶ್ರೀ ಭಾರತೀ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ

ಶ್ರೀ ಭಾರತೀ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ, ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಹರಿ ಪ್ರಸಾದ್‌ ಎಸ್‌. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ನಾಯಕತ್ವ ಗುಣ ಮತ್ತು ವ್ಯಕ್ತಿತ್ವ ವಿಕಸನ ಈ ವಿಷಯದ ಕುರಿತಾಗಿ ಮಾತನಾಡುತ್ತಾ, ವ್ಯಕ್ತಿಯೊಬ್ಬ ತನ್ನ ವ್ಯಕ್ತಿತ್ವದ ಬಗೆಗೆ ಆತ್ಮಾವಲೋಕನ ಮಾಡಿಕೊಂಡಾಗ ಅವನು ಒಳ್ಳೆಯ ನಾಯಕನಾಗಿ ಬೆಳೆಯಲು ಸಾಧ್ಯ ಹಾಗೂ ವಿದ್ಯಾರ್ಥಿಗಳ ಬದುಕಿನಲ್ಲಿ ಅವಕಾಶಗಳು ಒದಗಿ ಬಂದಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೀವನ್‌ದಾಸ್‌ ಅವರು, ವಿದ್ಯಾರ್ಥಿಗಳು ತಾವು ಬೆಳೆಯುವುದರೊಂದಿಗೆ ವಿದ್ಯಾಸಂಸ್ಥೆಯನ್ನು ಬೆಳೆಸಿಕೊಳ್ಳಬೇಕು ಎಂದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ, ಸ್ವಯಂ ನಿರ್ವಹಣೆಯ ಮೂಲಕ ಇತರರನ್ನು ಪ್ರೇರೇಪಿಸುವುದು ಉತ್ತಮ ನಾಯಕರ ಲಕ್ಷಣ ಎಂದರು. ಪ್ರಾಸ್ತಾವಿಕವಾಗಿ ಮಾನಾಡಿದ ವಾಣಿಜ್ಯ ಉಪನ್ಯಾಸಕರಾದ ಶ್ರೀ ಕಾರ್ತಿಕ್‌ ಕೃಷ್ಣ ಅವರು, ತಾನು ಬೆಳೆಯುವುದರೊಂದಿಗೆ ಇತರರನ್ನೂ ಬೆಳೆಸುವುದು ನಾಯಕತ್ವದ ಲಕ್ಷಣ ಎಂದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್‌ಕೃಷ್ಣ ಗಾಂವ್‌ಕರ್‌, ಉಪಾಧ್ಯಕ್ಷ ಗಣಪತಿ ಹೆಗಡೆ, ಕಾರ್ಯದರ್ಶಿ ಕು. ಆಶಿತಾ ಎನ್‌. ಹಾಗೂ ಜೊತೆ ಕಾರ್ಯದರ್ಶಿ ಕು. ಚೈತ್ರಾ ಅಮೀನ್‌ ಇವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪ್ರತಿಮ್‌ ಕುಮಾರ್‌ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಮಾರಂಭದಲ್ಲಿ ಕಾಲೇಜಿನ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು. ಆಶಿತಾ ಸ್ವಾಗತಿಸಿ, ಶ್ರವಣ್‌ ರಾಜ್‌ ವಂದಿಸಿದರು. ನಾಗಾಭರಣ ಪದಕಣ್ಣಾಯ ನಿರೂಪಣೆಗೈದರು.

Highslide for Wordpress Plugin